ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ವಿಫಲವಾದ ಜೇಟ್ಲಿ ಸಂಧಾನ - ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪನವರನ್ನು ಇಳಿಸಲು ರೆಡ್ಡಿ ಸಹೋದರರ ಯತ್ನ

ಬೆಂಗಳೂರು: ವಿಫಲವಾದ ಜೇಟ್ಲಿ ಸಂಧಾನ - ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪನವರನ್ನು ಇಳಿಸಲು ರೆಡ್ಡಿ ಸಹೋದರರ ಯತ್ನ

Fri, 30 Oct 2009 14:12:00  Office Staff   S.O. News Service
ಬೆಂಗಳೂರು, ಅ.29: ಈಗ ನಂಬರ್ ಗೇಮ್ ಶುರುವಾಗಿದೆ. ಅತ್ತ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವ ರೆಡ್ಡಿ ಸೋದರರು, ಗುರುವಾರ ತಮ್ಮ ಬೆಂಬಲಿಗ ಶಾಸಕರನ್ನು ಕಲೆಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ೨೫ಕ್ಕೂ ಹೆಚ್ಚು ಶಾಸಕರನ್ನು ‘ಊರು ಬಿಡಿಸಿ’ದ್ದಾರೆ. ಇತ್ತ ಯಡಿಯೂರಪ್ಪ ಅವರೂ ಸಂಖ್ಯಾಬಲ ಪ್ರದರ್ಶಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಗೊಳ್ಳುವ ಬದಲು, ಮತ್ತಷ್ಟು ತೀವ್ರಗೊಂಡಿದೆ. ಒಟ್ಟಿನಲ್ಲಿ ಪಕ್ಷದಲ್ಲಿ ಉರಿಯುತ್ತಿರುವ ಬೆಂಕಿ ನಂದಿಸುವ ಕುರಿತಂತೆ ಸ್ವತಃ ಬಿಜೆಪಿ ಹೈಕಮಾಂಡೇ ಗೊಂದಲಕ್ಕೆ ಸಿಲುಕಿದೆ. 
 
ಒಂದೆಡೆ ರೆಡ್ಡಿ ನಿಷ್ಠರಾಗಿರುವ ಹಲವು ಸಚಿವರನ್ನೂ ಒಳಗೊಂಡಂತೆ ಸುಮಾರು ೨೦ಕ್ಕೂ ಹೆಚ್ಚು ಶಾಸಕರು ಹೈದ್ರಾಬಾದ್‌ಗೆ ತೆರಳಿದ್ದರೆ, ಇನ್ನು ಕೆಲವರು ಗೋವಾಕ್ಕೆ ತೆರಳಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರನ್ನು ವಿರೋಧಿಸುವ ಇತರ ಶಾಸಕರು ಬೆಂಗಳೂರಿನಲ್ಲೇ ಉಳಿದುಕೊಂಡು ಪಕ್ಷದ ವರಿಷ್ಠ ಅರುಣ್ ಜೇಟ್ಲಿ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. 
ಮತ್ತೊಂದೆಡೆ, ಯಡಿಯೂರಪ್ಪ ಅವರೂ ತಮ್ಮ ಬೆಂಬಲಿಗರನ್ನು ಒಂದೆಡೆ ಸೇರಿಸಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದರು. ಆದರೆ, ಜೇಟ್ಲಿ ಸೂಚನೆಯ ಹಿನ್ನೆಲೆಯಲ್ಲಿ ಈ ಕಸರತ್ತಿನಿಂದ ಹಿಂದೆ ಸರಿದರು ಎಂದು ಮೂಲಗಳು ತಿಳಿಸಿವೆ.
 
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರ ಮುಂದುವರಿಕೆ ೫೦:೫೦ ಎಂಬಂತಾಗಿದೆ. ಸ್ಪೀಕರ್ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಹೆಚ್ಚತೊಡಗಿದೆ. ಬುಧವಾರ ಸಂಜೆ ಯಡಿಯೂರಪ್ಪ ನಾಯಕತ್ವದಲ್ಲಿ ಬದಲಾವಣೆಯಿಲ್ಲ ಎಂದಿದ್ದ ಜೇಟ್ಲಿ ನಿಲವು ಗುರುವಾರ ರಾತ್ರಿ ಹೊತ್ತಿಗೆ ಕ್ಷೀಣಿಸಿದೆ ಎನ್ನಲಾಗಿದೆ. 
ಆದರೆ, ಅಂತಿಮವಾಗಿ ಯಡಿಯೂರಪ್ಪ ನಾಯಕತ್ವಕ್ಕೆ ಮನ್ನಣೆ ನೀಡಿ ಭಿನ್ನರನ್ನು ಕಡೆಗಣಿಸಬೇಕೋ ಅಥವಾ ಭಿನ್ನರ ಪಟ್ಟಿಗೆ ಮಣಿದು ಯಡಿಯೂರಪ್ಪ ಅವರಿಗೆ ಕೊಕ್ ನೀಡಬೇಕೋ ಎಂಬ ಧರ್ಮಸಂಕಟದಲ್ಲಿ ಬಿಜೆಪಿ ಹೈಕಮಾಂಡ್ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ. 
 
ಸಂಧಾನ ಯತ್ನಕ್ಕೆ ಹಿನ್ನಡೆ: ಹೈಕಮಾಂಡ್ ಪ್ರತಿನಿಧಿಯಾಗಿ ಬಿಕ್ಕಟ್ಟು ಬಗೆಹರಿಸಲು ಆಗಮಿಸಿರುವ ಹಿರಿಯ ನಾಯಕ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿರುವ ಮುಖಂಡರು ಹಾಗೂ ಶಾಸಕರು ಯಡಿಯೂರಪ್ಪ ಪರ ಹಾಗೂ ವಿರೋಧದ ಅಭಿಪ್ರಾಯಗಳನ್ನು ನೀಡಿದ್ದಾರೆ. ಜತೆಗೆ ಸಂಖ್ಯಾಬಲದ ವಿವರವನ್ನೂ ಮುಂದಿಟ್ಟಿದ್ದಾರೆ. 
ಬುಧವಾರ ಹಾಗೂ ಗುರುವಾರ ದಿನವಿಡೀ ಜೇಟ್ಲಿ ಅವರು ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್, ವಿವಿಧ ಮಂತ್ರಿಗಳು ಹಾಗೂ ಶಾಸಕರೊಂದಿಗೆ ಸತತ ಮಾತುಕತೆ ನಡೆಸಿದ್ದಾರೆ. ಆದರೆ, ಉಭಯ ಬಣಗಳು ಒಪ್ಪುವಂತಹ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದಾಗಿ ರಾಜ್ಯ ಬಿಜೆಪಿ ಜಗಳ ಪಕ್ಷದ ಹೈಕಮಾಂಡ್‌ಗೆ ಇನ್ನಷ್ಟು ಕಗ್ಗಂಟಾಗಿದೆ. 
ಜೇಟ್ಲಿ ಅವರನ್ನು ಮತ್ತೊಂದು ಸುತ್ತು ಭೇಟಿ ಮಾಡಿ ಮಾತುಕತೆ ನಡೆಸಿದ ಕಂದಾಯ ಸಚಿವ ಕರುಣಾಕರರೆಡ್ಡಿ ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜತೆಗೆ ಸಂಘ ಪರಿವಾರದ ಮುಖಂಡರನ್ನೂ ಕಂಡು ಯಡಿಯೂರಪ್ಪ ಅವರ ಬದಲಾವಣೆಯನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. 
ಸುಮಾರು ೪೦ಕ್ಕೂ ಹೆಚ್ಚು ಶಾಸಕರು ಯಡಿಯೂರಪ್ಪ ನಾಯಕತ್ವವನ್ನು ವಿರೋಧಿಸುತ್ತಿದ್ದು, ತಮ್ಮೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ ಎಂಬ ಎಚ್ಚರಿಕೆಯ ಮಾತನ್ನು ಜನಾರ್ದನ ರೆಡ್ಡಿ ಬಹಿರಂಗವಾಗಿಯೇ ಹೇಳಿದ್ದಾರೆ. ಈ ೪೦ ಶಾಸಕರ ಪೈಕಿ ಸುಮಾರು ೧೮ರಿಂದ ೨೦ ಮಂದಿ ಜನಾರ್ದನರೆಡ್ಡಿ ಅವರ ಪಾಳೆಯದವರು. ಇದರಲ್ಲಿ ಕರುಣಾಕರರೆಡ್ಡಿ ಹಾಗೂ ಶ್ರೀರಾಮುಲು ಅವರೂ ಸೇರಿ ದ್ದು, ಎಲ್ಲ ಶಾಸಕರೂ ರಾಜೀನಾಮೆ ಸೇರಿದಂತೆ ಯಾವುದೇ ತ್ಯಾಗ ಕ್ಕೂ ಸಿದ್ಧರಾಗುವಂಥ ನಿಷ್ಠೆ ಹೊಂದಿದ್ದಾರೆ. 
ಇನ್ನುಳಿದ ಶಾಸಕರಲ್ಲಿ ಯಡಿಯೂರಪ್ಪನವರ ಬೆಂಬಲಿಗರೂ ಇದ್ದಾರೆ. ಇನ್ನು ಕೆಲವರು ಅವರ ಕಾರ್ಯವೈಖರಿಯಿಂದ ಬೇಸತ್ತವರಾಗಿದ್ದಾರೆ. ಈ ಶಾಸಕರು ಸಹಜವಾಗಿಯೇ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರ ನಾಯಕತ್ವಕ್ಕೆ ಬೆಂಬಲ ನೀಡಲು ಮುಂದಾಗಿದ್ದಾರೆ. ಇವರಲ್ಲಿ ಬಹುತೇಕರು ಉತ್ತರ ಕರ್ನಾಟಕಕ್ಕೆ ಸೇರಿದವರು ಎಂಬುದು ವಿಶೇಷ. ಉತ್ತರ ಕರ್ನಾಟದವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವುದಾದರೆ ಸಿಗಲಿ ಎಂಬ ಆಶಯವೂ ಅಡಗಿದೆ. 
  
ಅನೇಕ ದಿನಗಳಿಂದ ಯಡಿಯೂರಪ್ಪ ಅವರ ವಿರುದ್ಧ ಹರಿಹಾಯುತ್ತಿರುವ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಗೋಪಾಲಕೃಷ್ಣ ಬೇಳೂರು, ಡಾ|ಸಾರ್ವಭೌಮ ಬಗಲಿ, 
ಚಂದ್ರಶೇಖರ ಪಾಟೀಲ ರೇವೂರ್, ದೊಡ್ಡನಗೌಡ ಪಾಟೀಲ್, ವೈ.ಸಂಪಂಗಿ ಅವರು ಬಳ್ಳಾರಿ ಗಣಿ ಧಣಿಗಳ ಪಾಳೆಯದೊಂದಿಗೆ ಗುರುತಿಸಿಕೊಂಡಿದ್ದರೂ ಅಧಿಕಾರ ತ್ಯಾಗ ಮಾಡುವಂಥ ನಿಷ್ಠೆ ಹೊಂದಿಲ್ಲ. ಅವರದು 

ತ್ರಿಮೂರ್ತಿಗಳ ವಿರುದ್ಧ ಹೈಕಮಾಂಡ್‌ಗೆ ದೂರು: ಸಿ‌ಎಂ 
ಒಬ್ಬ ಮುಖ್ಯಮಂತ್ರಿಗೆ ಅಗೌರವ ತೋರಿಸಿರುವ ಬಳ್ಳಾರಿಯ ‘ತ್ರಿಮೂರ್ತಿ’ ಸಚಿವರನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಇಂತಹ (ರೆಡ್ಡಿ ಬ್ರದರ್ಸ್) ಹಲವಾರು ಜನರನ್ನು ನೋಡಿದ್ದೇನೆ. ಇಂತಹ ಶಕ್ತಿಗಳ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂಬುದೂ ನನಗೆ ಗೊತ್ತಿದೆ. ಇನ್ನು ಮುಂದೆ ಈ ಯಡಿಯೂರಪ್ಪ ಯಾರ ಒತ್ತಡಕ್ಕೂ ಬಗ್ಗುವುದಿಲ್ಲ, ಜಗ್ಗುವುದೂ ಇಲ್ಲ. 

ಬಿಜೆಪಿ ಹೈಕಮಾಂಡ್ ಮುಂದಿರುವ ಸವಾಲು ಮತ್ತು ಮಾರ್ಗಗಳು 
೧  ಭಿನ್ನಮತ ಇನ್ನಷ್ಟು ಉಲ್ಬಣವಾಗಿ ಪಕ್ಷದಲ್ಲಿ ಅರಾಜಕತೆ ಸೃಷ್ಟಿಯಾಗದಂತೆ ತಕ್ಷಣವೇ ಪರಿಹಾರ ಸೂತ್ರ ಕಂಡು ಹಿಡಿಯುವುದು. 
೨ ಯಡಿಯೂರಪ್ಪ ಅವರನ್ನು ಸಿ‌ಎಂ ಹುದ್ದೆಯಲ್ಲಿ ಮುಂದುವರಿಸುವುದಾದರೆ ಶೆಟ್ಟರ್, ರೆಡ್ಡಿ ಸಹೋದರರು ಹಾಗೂ ಬೆಂಬಲಿಗ ಶಾಸಕರನ್ನು ಸಮಾಧಾನಗೊಳಿಸುವುದು. 
೩ ಇನ್ನು ಕೆಲವು ತಿಂಗಳ ನಂತರ ನಾಯಕತ್ವ ಬದಲಾವಣೆ ಮಾಡುವುದಾಗಿ ರಾಜಿಸೂತ್ರ ಮುಂದಿಟ್ಟು ಉಭಯ ಬಣಗಳ ನಾಯಕರ ಮಧ್ಯೆ ಗುಪ್ತ ಒಪ್ಪಂದ ರೂಪಿಸುವುದು. 
೪  ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸುವುದಾದರೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರಿಗೆ ಪರ್ಯಾಯ ಸ್ಥಾನ ಕಲ್ಪಿಸುವುದು. 
೫  ಯಡಿಯೂರಪ್ಪನವರನ್ನು ರಕ್ಷಿಸುವುದು ಮುಖ್ಯವೋ ಶೆಟ್ಟರ್ ಹಾಗೂ ರೆಡ್ಡಿಗಳ ಸಿಟ್ಟು ತಣಿಸುವುದು ಮುಖ್ಯವೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವುದು. 
೬  ಕೆಲವು ಸಚಿವರನ್ನು ಸಂಪುಟದಿಂದ ತೆಗೆದು ಶೆಟ್ಟರ್ ಮತ್ತು ರೆಡ್ಡಿ ಬೆಂಬಲಿಗರನ್ನು ಸಂಪುಟಕ್ಕೆ ತುಂಬುವ ಬಗ್ಗೆ ಅವಲೋಕಿಸುವುದು. 
೭  ಸುಷ್ಮಾ ಸ್ವರಾಜ್ ಅವರನ್ನು ಬಳಸಿಕೊಂಡು ರೆಡ್ಡಿ ಸಹೋದರರಿಗೆ  ಸುಮ್ಮನಿರುವಂತೆ ಸೂಚಿಸುವುದು. 
೮  ಸಂಘ ಪರಿವಾರದ ಮಾರ್ಗದರ್ಶನ ಪಡೆದು ರೆಡ್ಡಿ ಬ್ರದರ್ಸ್ ಎದುರಿಸುವ ಧೈರ್ಯ ತೋರುವುದು. 
೯  ಯಡಿಯೂರಪ್ಪ ಮತ್ತು ಶೆಟ್ಟರ್‌ಗೆ ಮಠಾಧಿಪತಿಗಳಿಂದ ‘ಸೂಚನೆ’  ಕೊಡಿಸುವುದು. ಅಲ್ಲದೆ, ಅದಕ್ಕೆ ಒಪ್ಪುವಂತೆ ರೆಡ್ಡಿ ಬ್ರದರ್ಸ್‌ಗಳ ಮೇಲೂ ಒತ್ತಡ ಹೇರುವುದು. 
೧೦  ಬೆಂಗಳೂರಲ್ಲಿ ಇತ್ಯರ್ಥವಾಗದ ಸಮಸ್ಯೆಗೆ ದೆಹಲಿಯಲ್ಲಿ ಪರಿಹಾರ ಹುಡುಕುವುದು. ಅಲ್ಲಿಗೇ ಯಡಿಯೂರಪ್ಪ, ಶೆಟ್ಟರ್, ರೆಡ್ಡಿ ಬ್ರದರ್ಸ್‌ಗಳನ್ನು ಕರೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದು. 

‘ಊರು ಬಿಟ್ಟ’ ರೆಡ್ಡಿ ಪಾಳೆಯ 
ಇತ್ತ ಬೆಂಗಳೂರಿನಲ್ಲಿ ಬಿಕ್ಕಟ್ಟು ಶಮನಕ್ಕೆ ಬಿರುಸಿನ ಪ್ರಯತ್ನಗಳು ನಡೆಯುತ್ತಿದ್ದರೆ, ಸಚಿವ ಜನಾರ್ದನರೆಡ್ಡಿ ಅವರು ತಮ್ಮ ಬೆಂಬಲಿಗ ಶಾಸಕರನ್ನು ಹೈದರಾಬಾದ್ ಹಾಗೂ ಗೋವಾಕ್ಕೆ ಕಳುಹಿಸಿದ್ದಾರೆ. ಇವರೆಲ್ಲಾ ಹೈದರಾಬಾದ್‌ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಮೀಪದ ಹೋಟೆಲ್ ಹಾಗೂ ಆನಂದ್ ಅಸ್ನೋಟಿಕರ್ ನೇತೃತ್ವದಲ್ಲಿ ಗೋವಾದ ರೆಸಾರ್ಟ್ ಒಂದರಲ್ಲಿ ಎರಡು ತಂಡವಾಗಿ ವಾಸ್ತವ್ಯ ಹೂಡಿದ್ದಾರೆ. ತಮ್ಮ ಬೆಂಬಲಿಗ ಶಾಸಕರನ್ನು ಯಡಿಯೂರಪ್ಪ ಬಣದ ಮುಖಂಡರು ಮನವೊಲಿಸಿ ಸಳೆಯಬಹುದು ಎಂಬ ಭೀತಿ ರೆಡ್ಡಿ ಅವರ ಈ ನಡೆಗೆ ಕಾರಣ. 

ರೆಡ್ಡಿ ಬಣದ ಶಾಸಕರು

ಯಡಿಯೂರಪ್ಪ ಕಾರ್ಯವೈಖರಿ ವಿರೋಧಿ ಪಾಳೆಯ. 
೧. ವೀರಣ್ಣ ಚರಂತಿಮಠ (ಬಾಗಲಕೋಟೆ) 
೨. ಎಂ.ವಿ.ನಾಗರಾಜು (ನೆಲಮಂಗಲ) 
೩. ಎಂ.ನಾರಾಯಣಸ್ವಾಮಿ (ಆನೇಕಲ್) 
೪. ಅಭಯ್ ಪಾಟೀಲ್ (ಬೆಳಗಾವಿ ದಕ್ಷಿಣ) 
೫. ರಾಜು ಕಾಗೆ (ಕಾಗವಾಡ) 
೬. ಸಿ.ಟಿ.ರವಿ (ಚಿಕ್ಕಮಗಳೂರು) 
೭. ಸೀಮಾ ಮಸೂತಿ (ಧಾರವಾಡ) 
೮. ವೀರಭದ್ರಪ್ಪ ಹಾಲಹರವಿ 
   (ಹುಬ್ಬಳ್ಳಿ-ಧಾರವಾಡ ಪೂರ್ವ) 
೯. ಎಸ್.ಐ.ಚಿಕ್ಕನಗೌಡರ್ (ಕುಂದಗೋಳ) 
೧೦. ಶಂಕರ ಪಾಟೀಲ ಮುನೇನಕೊಪ್ಪ (ನವಲಗುಂದ) 
೧೧. ಸುರೇಶ್‌ಗೌಡ ಪಾಟೀಲ (ಬ್ಯಾಡಗಿ) 
೧೨. ಕಳಕಪ್ಪ ಬಂಡಿ (ರೋಣ) 
೧೩. ಚಂದ್ರಶೇಖರ ಪಾಟೀಲ್ ರೇವೂರ (ಗುಲ್ಬರ್ಗ ದಕ್ಷಿಣ) 
೧೪. ಎಚ್.ಎಸ್.ಶಂಕರಲಿಂಗೇಗೌಡ (ಚಾಮರಾಜ) 
೧೫. ಎಸ್.ಎ.ರಾಮದಾಸ್ (ಕೃಷ್ಣರಾಜ) 

ಹೈದ್ರಾಬಾದ್, ಗೋವಾಕ್ಕೆ ತೆರಳಿದ ಶಾಸಕರು 
ಬಾಲಚಂದ್ರ ಜಾರಕಿಹೊಳಿ 
ಶಿವನಗೌಡ ನಾಯಕ 
ಗೂಳಿಹಟ್ಟಿ ಶೇಖರ್ 
ಶಿವರಾಜ್ ತಂಗಡಗಿ, 
ಆನಂದ್ ಅಸ್ನೋಟಿಕರ್ 
ಎಂ.ಪಿ.ರೇಣುಕಾಚಾರ್ಯ 
ವೈ.ಸಂಪಂಗಿ, 
ಸೋಮಶೇಖರ ರೆಡ್ಡಿ 
ಚಂದ್ರಶೇಖರ್ ಪಾಟೀಲ್ ರೇವೂರ 
ದೊಡ್ಡನಗೌಡ ಪಾಟೀಲ್ 
ಸಾರ್ವಭೌಮ ಬಗಲಿ 
ಮಾನಪ್ಪ ವಜ್ಜಲ್, 
ಪ್ರತಾಪ್‌ಗೌಡ ಪಾಟೀಲ್ ಈಶಣ್ಣ ಗುಲ್ಗಣ್ಣವರ್ 
ರಾಮಣ್ಣ ಲಮಾಣಿ 
ಎಸ್.ಕೆ.ಬೆಳ್ಳುಬ್ಬಿ 
ಬಿ.ಪಿ.ಹರೀಶ್ ಸುರೇಶ್‌ಗೌಡ 
ಚಂದ್ರಾ ನಾಯಕ್   
ಆನಂದ್‌ಸಿಂಗ್ 
ನೇಮಿರಾಜ್ ನಾಯಕ್ 
ಸೋಮಲಿಂಗಪ್ಪ 
ನರಸಿಂಹನಾಯಕ್ 

ಕಂಸನ ಅಂತ್ಯ 
ಅನೇಕ ಅವಕಾಶಗಳನ್ನು ನೀಡಿದರೂ ತಪ್ಪು ತಿದ್ದಿಕೊಳ್ಳದ ಕಂಸನಿಗೆ ಶ್ರೀಕೃಷ್ಣ ಅಂತ್ಯ ಹಾಡಿದ ಗತಿಯೇ ನಮ್ಮ ಯಜಮಾನರಿಗೆ ಆಗುತ್ತೆ. ನಾವು ಸಂತ್ರಸ್ತರಿಗೆ ಮನೆ ಕಟ್ಟುವ ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅವರು (ಸಿ‌ಎಂ) ಇದರ ವಿರುದ್ಧ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಒಳ್ಳೆ ಕೆಲಸ ಮಾಡಿದ ಬಳ್ಳಾರಿ ಡಿಸಿಗೆ ಸೂಕ್ತ ಬಹುಮಾನ ಕೊಟ್ಟಿದ್ದಾರೆ. 
ಕರುಣಾಕರ ರೆಡ್ಡಿ 

ಕೊನೇ ಭಾಷಣ 
ಗದಗ ಜಿಲ್ಲೆ ಉಸ್ತುವಾರಿ ಸಚಿವನಾಗಿ ಇದು ನನ್ನ ಕೊನೆಯ ಭಾಷಣ. ನಾನು ರಾಜಕೀಯದಿಂದಲೇ ನಿವೃತ್ತಿಯಾಗಲು ಚಿಂತಿಸಿದ್ದೇನೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆದಿವೆ. ಈಗಲೂ ಅದು ಮುಂದುವರೆದಿದೆ. ಒಟ್ಟಾರೆ ರಾಜಕೀಯ ನನಗೆ ನೋವು ತಂದಿದೆ. 
ಶ್ರೀರಾಮುಲು 

ಸಿ‌ಎಂ ಒಳ್ಳೆಯವರು 
ಬಿಜೆಪಿಯಿಂದಲೇ ನಮ್ಮ ರಾಜಕೀಯ ಜೀವನ ಪ್ರಾರಂಭ. ನಿವೃತ್ತಿಯಾಗುವುದೂ ಬಿಜೆಪಿಯಿಂದಲೇ. ೪೦ಕ್ಕಿಂತ ಹೆಚ್ಚು ಶಾಸಕರು ತಮ್ಮ ಸಂಪರ್ಕದಲ್ಲಿದ್ದು, ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಬದಲಾವಣೆ ಆಗಬೇಕು. ಸಿ‌ಎಂ ಒಳ್ಳೆಯವರು, ಆದರೆ ಕೆಲವರು ಅವರ ಕಿವಿ ಊದುತ್ತಿದ್ದಾರೆ. 
ಜನಾರ್ದನ ರೆಡ್ಡಿ 

ಸೌಜನ್ಯ: ಕನ್ನಡಪ್ರಭ


Share: